Friday, July 24, 2020

ಜಯತು ಕೋದಂಡರಾಮ / Jayatu Kodanda Rama

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು   

ಧ್ವನಿಸುರಳಿಯ ಕೊಂಡಿ / Hear the song 
                                         
                                          
ಕಪಿಕಟಧುರೀಣಃ ಕಾರ್ಮುಕನ್ಯಸ್ತ ಬಾಣಃ
ಕ್ಷಪಿತದಿತಿಜಸೈನ್ಯಃ ಕ್ಷತಿಯೇಷು ಅಗ್ರಗಣ್ಯಃ ।
ಜಲಧಿರಚಿತಸೇತುಃ ಜಾನಕೀತೋಷಹೇತುಃ
ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ ||

ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.             || ಪ ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲೇ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ.              || ೧ ||

ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ                 || ೨ ||

ವಸುದೇವ ಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ                 || ೩ ||

ಭಾವಾರ್ಥ:

* ಇದು ರಾಮದೇವರ ವಿಷ್ಣುವಿನ ದಶಾವತಾರ ಸ್ತುತಿ *

ಜಯತು ಕೋದಂಡರಾಮ ಜಯತು  ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.          

ಜಯತು           : ಜಯವಾಗಲಿ 
ಕೋದಂಡ         : ಬಿಲ್ಲುಧನಸ್ಸು
ಕೋದಂಡರಾಮ : ಬಿಲ್ಲನು ಹಿಡಿದಿರುವ ರಾಮ
ದಶರಥರಾಮ    ದಶರಥ ರಾಜರ ಮಗ ರಾಮ
ಸೀತಾರಾಮ      : ಸೀತಾ ಪತಿ ರಾಮ
ರಘುರಾಮ        : ರಘುವಂಶ ರಾಮ
                      : ಇಕ್ಷ್ವಾಕು ವಂಶಿ (ಸೂರ್ಯವಂಶಿ) ರಘು -> ಅಜ -> ದಶರಥ -> ಶ್ರೀರಾಮ 

ತಮದೈತ್ಯನನು ಮಡುಹಿ: ಮತ್ಸ್ಯಾವತಾರ
ಬ್ರಹ್ಮನಿಂದ ವೇದಗಳನ್ನು ಅಪಹರಿಸಿದ ಹಯಗ್ರೀವಾಸುರ ನಾಮಕ ದೈತ್ಯನ ಸಂಹರಿಸಿದವನು
ಮತ್ಸ್ಯ : ಮೀನು

ಮಂದರಾಚಲ ನೆಗಹಿ : ಕೂರ್ಮಾವತಾರ
ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರದಿ ಮಂದರಗಿರಿಯನೆತ್ತಿದವನು
ಮಂದರ : ದಟ್ಟವಾದ, ಸಾಂದ್ರವಾದ 
ಅಚಲ    : ಕದಲದ,ಅಲುಗದ, ಬೆಟ್ಟ, ಗಿರಿ 
ಕೂರ್ಮಾ : ಆಮೆ

ಪ್ರೀತಿಯಿಂದಲೇ ತಂದು ಸಕಲ ಭೂತಳವ: ವರಾಹಾವತಾರ
ವರಾಹಾವತಾರದಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಉದ್ಧರಿಸಿದವನು
ವರಾಹ : ಹಂದಿ

ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ.  : ನರಸಿಂಹಾವತಾರ      
ಕಂಬದಿಂದ ಹೊರಗೆ ಬಂದು ಪ್ರಹ್ಲಾದನ ಭೀತಿ ಬಿಡಿಸಿದ ನರಸಿಂಹನು

ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ: ವಾಮನಾವತಾರ
ಈರಡಿ : ಇಡೀ ಭೂಮಿಯನ್ನು ತನ್ನ ಎರಡು ಹೆಜ್ಜೆಗಳಿಂದ ಅಳೆದು
ವಾಮನನು ಬಲಿ ಚಕ್ರವರ್ತಿಯ ಹತ್ತಿರ 
ಮೂರು ಹೆಜ್ಜೆಯಷ್ಟು ದಾನವ ಬೇಡಿ, ಮೂರು ಹೆಜ್ಜೆಗಳನು ಇಡುತ್ತಾನೆ 

೧. ಭೂಮಿಯಿಂದ ಕೆಳಗಿನ ೭ ಲೋಕಗಳು
೨. ಭೂಮಿಯಿಂದ ಮೇಲಿನ ೭ ಲೋಕಗಳು
೩. ಬಲಿಯ ತಲೆ

ಬಲಿಯಲ್ಲಿ ಜೀವದ್ವಯ ಆವೇಶ ಇರುತ್ತದೆ 
ಬಲಿ ಎಂಬ ರಾಕ್ಷಸ ಹಾಗು ಬಲಿ ಎಂಬ ದೇವತೆ.. 
ರಾಕ್ಷಸನನ್ನು ತಮಸಿಗೆ ಅಟ್ಟಿ,
ಬಲಿಯನುದ್ಧರಿಸಿದ ವಾಮನನಾವತಾರಿ ಶ್ರೀಹರಿ 

ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ : ಪರಶುರಾಮಾವತಾರ
ತನ್ನ ತಂದೆ ಜಮದಗ್ನಿಯನ್ನು ಕೊಂದ ದುರಾಚಾರಿ ಕ್ಷತ್ರಿಯರನ್ನು (ರಾಜ ಕಾರ್ತವೀರ್ಯ) ಇಲ್ಲವಾಗಿಸಿದ ಪರಶುರಾಮ

ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ : ಶ್ರೀರಾಮಾವತಾರ          

ಮಾರುವೇಷದಿ ಬಂದು, ಲಕ್ಷ್ಮಣರೇಖೆಯ ದಾಟುವನಂತೆ ಮಾಡಿ, 
ಸೀತಾಮಾತೆಯನು ಅಪಹರಿಸಿದ ದಶಮುಖ ರಾವಣನ 
ಚೆಂಡಾಡಿ ಅಸುನೀಗಿಸಿದ ಕೋದಂಡರಾಮ : ಶ್ರೀರಾಮ   

ಲಲನೆಗೋಸುಗ = ಲಲನೆಗೆ + ಓಸುಗ
ಲಲನೆಗೆ : ಹೆಣ್ಣಿಗೆ: ಸೀತೆಗೆ
ಓಸುಗ   : ಓಸ್ಕರ, ಸಲುವಾಗಿ
ಲಲನೆಗೋಸುಗ : ಸೀತೆಗೋಸ್ಕರ

ವಸುದೇವ ಸುತನೆನಿಸಿ : ಶ್ರೀಕೃಷ್ಣಾವತಾರ
ವಸುದೇವ ಸುತ : ವಸುದೇವನ ಮಗ 
ದುಷ್ಟ ಶಿಕ್ಷಣಾರ್ಥ, ಶಿಷ್ಟ ರಕ್ಷಣಾರ್ಥ  
ಅಧರ್ಮ ನಾಶಾರ್ಥ, ಧರ್ಮಸಂಸ್ಥಾಪನಾರ್ಥ  
ಅವತರಿಸಿದ ಪಾರ್ಥಸಾರಥಿ : ಶ್ರೀಕೃಷ್ಣ

ವನಿತೆಯರ ವ್ರತಗೆಡಿಸಿ : ಬೌದ್ಧಾವತಾರ
ವನಿತೆ : ಸ್ತ್ರೀ 
ತ್ರಿಪುರಾಸುರ ಮಹಾ ಪತಿವ್ರತೆ ಪತ್ನಿಯರನ್ನು ಮೋಹಿಸಿ, 
ಅವರ ಪತಿಯಂದಿರ ರಕ್ಷಣೆ ಸಲುವಾಗಿ ನೆಡೆಸುತ್ತಿದ್ದ ವ್ರತವ ಕೆಡಿಸಿ
ರುದ್ರದೇವರಿಗೆ ತ್ರಿಪುರಾಸುರ ವಧಿಸಲು ಸಹಾಯ ಮಾಡಿದವ 

ಎಸೆವ ತುರಗವನೇರಿ ಮಲ್ಲರನು ಸವರಿ: ಕಲ್ಕಿ ಅವತಾರ
ತುರಗ   : ಕುದುರೆ
ಮಲ್ಲರು : ದುರಾಚಾರಿಗಳು
ಸವರು  : ಕತ್ತರಿಸು (ಈ ದೇವರನಾಮಕ್ಕೆ)

ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ವಸುಧೆ : ಭೂಮಿ
ಭೂಮಿಯಲ್ಲಿ ನೀನೇ ನಮ್ಮನ್ನು ಪಾಲಿಸಬೇಕು ಕಾಪಾಡಬೇಕು ಪುರಂದರವಿಠಲ

ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ         
ಬಿಸಜ     : ಕಮಲ
ಬಿಸಜಾಕ್ಷ : ಕಮಲದ ಕಣ್ಣುಳ್ಳವನು : ಶ್ರೀರಾಮ

ಅಯೋಧ್ಯ ಪುರವಾಸ ನಾದ ಬಿಸಜಾಕ್ಷ ರಘುರಾಮ..
ದೇವರನಾಮ ಶ್ರೀಪುರಂದರದಾಸರು ಅಯೋಧ್ಯಾ ಕ್ಷೇತ್ರ ಸಂದರ್ಶಿಸಿದಾಗ
ಅಂತರಂಗದಲ್ಲಿ ಕಂಡ ಶ್ರೀರಾಮದೇವರ ರೂಪಗಳನ್ನು ವರ್ಣಿಸಿದ ಪರಿ.

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                     
                                        ***  ಜೈ ಶ್ರೀರಾಮ್ ***
========================================================

Saahitya  : Sri Purandaradaasaru
Singer     : Sri Vidyabhushanaru

kapikaTadhurINaH kArmukanyasta bANaH
kShapitaditijasainyaH kShatriyeShu agragaNyaH |
jaladhirachitasetuH jAnakItoShahetuH
pathi pathi guNasAMdraH pAtu mAM rAmachaMdraH ||

jayatu kodanDa rAma jayatu Dasharatha rAma
jayatu sItArAma jayatu raghurAma                                      || pa ||

tamadaityananu maDuhi mandarAchala negahi
prItiyindale tandu sakala bhUtaLava
kShetradindudbhavisi moryiDuva bAlakana
bhItiyanu biDisi nere kAyda raghurAma                               || 1 ||

baliyoLu dAnava beDi nelana IraDi mADi
Chaladinda kShatriyara kulava hogADi
lalangosuga banda nevadinda rAvaNana
talegaLanu chenDADi mereda raghurAma                            || 2 ||

vasudeva sutanenisi vaniteyara vratageDisi
eseva turagavaneri mallaranu savari
vasudheyoLu purandara viThalanI pAlisai
bisajAkShayodhya puravAsa raghurAma                               || 3 ||

                                  ***  Jai Sri Ram ***

2 comments:

  1. ಸೊಗಸಾಗಿದೆ ಗಿರಿ...ಅರ್ಥಗರ್ಭಿತವಾಗಿದೆ...ಅಭಿನಂದನೆಗಳು ನಿಮ್ಮ ಪರಿಶ್ರಮಕ್ಕೆ ಗಿರಿ

    ReplyDelete
    Replies
    1. ಹೃದಯಪೂರ್ವಕ ಧನ್ಯವಾದಗಳು ಶ್ರೀ ... ನಿಮ್ಮ ನಿರಂತರ ಪ್ರೋತ್ಸಾಹ ... ನನಗೆ ಕೊಡುವುದು ಉತ್ಸಾಹ

      Delete