Tuesday, August 18, 2020

ರಾಮ ಭಜನೆ ಮಾಡೋ ಮನುಜ / Rama Bhajane Maado Manuja

ಸಾಹಿತ್ಯ      : ಶ್ರೀ ವಿದ್ಯಾಪ್ರಸನ್ನ ತೀರ್ಥರು 

ಗಾಯಕರು  : ಶ್ರೀಮತಿ ದಿವ್ಯ ಗಿರಿಧರ್ 



ಧ್ವನಿಸುರಳಿಯ ಕೊಂಡಿ / Hear the song
 

ರಾಮ ಭಜನೆ ಮಾಡೋ ಮನುಜ                            || ಪ || 

ರಾಮ ರಾಮ ಜಯ ರಾಘವ ಸೀತಾ 

ರಾಮನೆಂದು ಸುಸ್ವರದಲಿ ಪಾಡುತ                        || ಅ.ಪ ||

 

ತಾಳವನು ಬಿಡಬೇಡ ಮೇಳವನು ಮರಿಬೇಡ

ತಾಳ ಮೇಳಗಳ ಬಿಟ್ಟು ನುಡಿದರೆ 

ತಾಳನು ನಮ್ಮಿಳಾಸುತೆಯರಸನು                          || ೧ ||

 

ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ 

ಸತ್ಯ ಜ್ಞಾನ ಅನಂತ ಬ್ರಹ್ಮನು 

ಹೃದ್ಗತನೆಂದರಿಯುತ  ಭಕುತಿಯಲಿ                       || ೨ ||

 

ಭಲರೆ ಭಲರೆಯೆಂದು ತಲೆದೂಗುವ ತೆರದಿ 

ಕಲಿಯುಗದಿ ವರ ಕೀರ್ತನೆಯಿಂದಲಿ

ಸುಲಭದಿ ಹರಿಯ ಪ್ರಸನ್ನತೆ ಪಡೆಯಲು                   || ೩ ||


ಭಾವಾರ್ಥ :   

ರಾಮನೆಂದು ಸುಸ್ವರದಲಿ ಪಾಡುತ : 

ಶ್ರೀರಾಮನಾಮವನು ಅಂತಃ ಶುದ್ಧಿಯೊಳಗೊಂಡ ಸ್ವರದಲಿ ಹಾಡುತ

 

ತಾಳವನು ಬಿಡಬೇಡ 

ಶ್ರೀರಾಮನು ನಮ್ಮೊಳು ಕೂತು ಹಾಕುವ ತಾಳ

ಅಂದರೆ ಸನ್ಮಾರ್ಗದ ಸೂಚನೆಗಳೆಂಬ ತಾಳಕೆ ಹೆಜ್ಜೆಯ ಹಾಕುವುದನು ತ್ಯಜಿಸದಿರು

 

ಮೇಳವನು ಮರಿಬೇಡ

ಶ್ರೀರಾಮನು ತೋರಿದ ಸಜ್ಜನರ ಸಂಗವ ಮರೆಯದಿರು

 

ತಾಳ ಮೇಳಗಳ ಬಿಟ್ಟು ನುಡಿದರೆ 

ತಾಳನು ನಮ್ಮಿಳಾಸುತೆಯರಸನು

ಶ್ರೀರಾಮನು ತೋರಿದ ಸನ್ಮಾರ್ಗ, ಸಜ್ಜನರ ಸಂಗಗಳನು ತೊರೆದು ನುಡಿದು ನಡೆದರೆ 

ನಿನ್ನೊಳಗಿನ ಶ್ರೀರಾಮನೇ ಯಮನಾಗುವನು 

 

ನಮ್ಮಿಳಾಸುತೆಯರಸನು = ನಮ್ಮ+ಇಳಾಸುತೆ+ಅರಸನು

                  ಇಳಾಸುತೆ = ಇಳೆಯ + ಸುತೆ

                         ಇಳೆ  : ಭೂದೇವಿ, ಭೂಮಿ ತಾಯಿ 

                         ಸುತೆ : ಮಗಳು

                  ಇಳಾಸುತೆ : ಸೀತಾಮಾತೆ 

 

ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ

" ಮನವೆಂಬುದು ಮರ್ಕಟದಂತೆ

ನಿನ್ನ ಚಿತ್ತ, ಅಂದರೆ ನಿನ್ನ ಮನವು ಮರ್ಕಟನ ಭಂಟನಾದರೆ

ಎಲ್ಲಿಯ ಏಕಾಗ್ರತೆ, ಎಲ್ಲಿಯ ಸಾಧನೆ, ಎಲ್ಲಿಯ ಸಾರ್ಥಕತೆ.

ಮನದಿ ಸರ್ವೋತ್ತಮನಾದ ಶ್ರೀರಾಮನ ರೂಪವ ನೆಲೆಯಾಗಿಸಿ, 

ಜೀವೋತ್ತಮನಾದ ವಾಯುದೇವನನು ಶ್ವಾಸ-ನಿಶ್ವಾಸದಿ ಗಮನಿಸಿ ಧ್ಯಾನಗೈದು ಏಕಾಗ್ರಚಿತ್ತನಾಗು 

     ಭೃತ್ಯ : ಭಂಟ 

 ಮರ್ಕಟ : ಕೋತಿ, ಮಂಗ : ಸಂದರ್ಭಕ್ಕೆ "ಚಂಚಲತೆ" ಎಂದರ್ಥ  

 

ಸತ್ಯ ಜ್ಞಾನ ಅನಂತ ಬ್ರಹ್ಮನು 

ಹೃದ್ಗತನೆಂದರಿಯುತ  ಭಕುತಿಯಲಿ   

  ಹೃದ್ಗತ = ಹೃತ್ + ಗತ 

   ಹೃತ್ : ಹೃದಯ

     ಗತ : ಒಳಗಿರುವ

 ಹೃದ್ಗತ : ಹೃದಯದಲ್ಲಿ ನೆಲಸಿಹ

 ಪರಮಸತ್ಯ ಜ್ಞಾನಸಾಗರ ಅನಂತಾನಂತ

ಸಕಲಲೋಕಾಧೀಶ ಶ್ರೀರಾಮನು 

ನಮ್ಮೊಳಗಿನ ಹೃದಯವೆಂಬ ಗರ್ಭಗುಡಿಯಲಿ ನೆಲಸಿಹನು 

ಎಂದರಿಯುತ, ಭಕ್ತಿಯಿಂದ ಅವನ ನಾಮಸ್ಮರಣೆ ಮಾಡು

 

ಭಲರೆ ಭಲರೆಯೆಂದು ತಲೆದೂಗುವ ತೆರದಿ 

ಕಲಿಯುಗದಿ ವರ ಕೀರ್ತನೆಯಿಂದಲಿ

ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 

ಶ್ರೀರಾಮರ ಮಹಿಮೆಯನರಿತು, ಭಲೇ, ಧನ್ಯ, ಧನ್ಯೋಸ್ಮಿ 

ಎಂದು ಮೈಮರೆತು ತಲೆದೂಗುತ, ಕಲಿಯುಗದಲಿ 

ಹರಿದಾಸರ ಕೀರ್ತನೆಗಳನು ಅಂತಃಶುದ್ಧಿಯೊಳು ಪಾಡಿ

ಪೊಗಳಿ ಶ್ರೀರಾಮರ ಕೃಪೆಯನು ಸುಲಭವಾಗಿ ಪಡೆದು

ಕೃತಾರ್ಥರಾಗಿ ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥರು ಸಂಬೋಧಿಸಿದ್ದಾರೆ

 

      **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                    
                                          ***  ಜೈ ಶ್ರೀರಾಮ್ ***
==========================================================

Saahitya  : Sri Vidya Prasanna Theertharu
Singer     : Smt Divya Giridhar


rAma bhajane mADo manuja                                    || pa ||

rAma rAma jaya rAghava sItA

rAmanendu susvaradali pADuta                                       || a.pa ||

 

tALavanu biDabeDa meLavanu maribeDa

tALa meLagaLa biTTu nuDidare

tALanu nammiLAsuteyarasanu                                         || 1 ||

 

chittavanu chalisadiru bhRRutya manobhAvadali

satya gnAna ananta brahmanu

hRRudgatanendariyuta bhakutiyali                                 || 2 ||

 

bhalare bhalareyendu taledUguva teradi

kaliyugadi vara kIrtaneyindali

sulabhadi hariya prasannate paDeyalu                           || 3 ||

                                
                                    ***  Jai Sri Ram ***

Thursday, August 13, 2020

ರಾಮ : ನಿನ್ನ ನಾಮ ಇದ್ದರೆ ಸಾಕೋ / Rama : Ninna naama iddare saako

ಸಾಹಿತ್ಯ     : ಶ್ರೀ ಪುರಂದರದಾಸರು
ಗಾಯಕರು : ಶ್ರೀ ಪುತ್ತೂರು ನರಸಿಂಹ ನಾಯಕ
ರು


ಧ್ವನಿಸುರಳಿಯ ಕೊಂಡಿ / Hear the song 
 

ನಿನ್ನ ನಾಮ ಇದ್ದರೆ ಸಾಕೋ                             || ಪ ||

ಮುನಿದರೆ ಮುನಿ ಶ್ರೀರಾಮ ನಿನ್ನಾಣೆ                      || ಅ.ಪ ||

 

ಹೊದ್ದಿದ ಪಾಪವನ್ನೆಲ್ಲ

ಛಿನ್ನ ಛಿದ್ರವ ಮಾಡಿ ಖಂಡಿಸಿ ಬಿಡುವ

ಎದ್ದರೆ ಸಂಗಡ ಬರುವ

ಎನ್ನ ಮುದ್ದಿಸಿ ಮುಂದೆ ಮುಕುತಿಯ ಕೊಡುವ          || ೧ ||

 

ಸಾರೆ ಸಂಗಡ ಬರುವ

ಎನ್ನ ಸೇರಿದ ಪಾಪ ಕೋಪದಿ ತರಿವ

ಝಾಡಿಸಿ ಕರ್ಮವ ಕಳೆವ

ಎನ್ನ ಕೂಡಿಕೊಂಡು ವೈಕುಂಠಕೆ ನಡೆವ                   || ೨ ||

 

ಪರಮಾನಂದವನೀವ

ನಿನ್ನ ಸ್ಮರಣೆಯೆಂಬುದು ಎನ್ನ ಜೀವಕೆ ಜೀವ

ವರವಕೊಡುವುದೊಂದು ಭಾವ

ಈ ಪರಿ ಪುಸಿಯಲ್ಲ ಶ್ರೀ ಪುರಂದರವಿಠಲ                || ೩ ||

 

ಭಾವಾರ್ಥ:

ಹೊದಿದ್ದ  : ಅಂಟಿಕೊಂಡಿದ್ದ

ಛಿನ್ನ        : ನಾಶಗೊಳಿಸಿದ, ಕತ್ತರಿಸಿದ;ತುಂಡುಮಾಡಿದ

ಛಿದ್ರ        : ರಂದ್ರ, ಬಿರುಕು, ದೌರ್ಬಲ್ಯ

ಸಾರೆ        : ಹತ್ತಿರ, ಅಂಚು, ಬಳಿ

ಝಾಡಿಸಿ  : ಕೊಡಹಿ, ಹೊಡೆದೋಡಿಸಿ, ದಬಾಯಿಸಿ 

ಈವ        : ಕೊಡುವ

ಪುಸಿ        : ಹುಸಿ, ಸುಳ್ಳು

ಪರಮಾನಂದವನೀವ = ಪರಮಾನಂದವನು + ಈವ


ಸಾರೆ ಸಂಗಡ ಬರುವ :

ಸಾರೆ- ನಡೆ.. ನಾವು ಸ್ವಲ್ಪ ಅವನೆಡೆ ನಡೆದರೆ, ಅವನು ನಮ್ಮ ಸಂಗಡವೇ ಬಂದು ಬಿಡುವ


ಛಿನ್ನ ಛಿದ್ರವ ಮಾಡಿ ಖಂಡಿಸಿ ಬಿಡುವ :

ಅಂಟಿಕೊಂಡಿದ್ದ ಪಾಪವನ್ನೆಲ್ಲಾ ನಾಶಗೊಳಿಸಿ ಬಿಡುವವನು


  **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**

                                    
                                            ***  ಜೈ ಶ್ರೀರಾಮ್ ***

===================================================


Saahitya  : Sri Purandaradaasaru 
Singer      : Sri Putturu Narasimha Nayakaru

ninna nAma iddare sAko                               || pa ||

munidare muni shrIrAma ninnANe                   || a.pa ||

 

hoddida pApavanella

Chinna Chidrava mADi khanDisi biDuva

eddare sangaDa baruva

enna muddisi munde mukutiya koDuva            || 1 ||

 

sAre sangaDa baruva

enna serida pApa kopadi tariva

jhADisi karmava kaLeva

enna kUDikonDu vaikunThake naDeva            || 2 ||

 

paramAnandavanIva

ninna smaraNeyeMbudu enna jIvak jIva

varavakoDuvudondu bhAva

I pari pusiyalla shrI purandaraviThala            || 3 ||


                                 ***  Jai Sri Ram ***